ತೊರೆದು ಜೀವಿಸಬಹುದೇ ಹರಿ
ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ. ...!!ಪ!!
ತಾಯಿ ತಂದೆಯ ಬಿಟ್ಟು ತಪವ
ಮಾಡಲು ಬಹುದು,
ದಾಯಾದಿ ಬಂಧುಗಳ ಬಿಡಲು
ಬಹುದು,
ರಾಯ ತಾ ಮುನಿದರೆ ರಾಜ್ಯವನೆ
ಬಿಡಬಹುದು,
ಕಾಯಜಾ ಪಿತ ನಿನ್ನ ಅಡಿಯ
ಬಿಡಲಾಗದು..!!
ಒಡಲು ಹಸಿಯಲು ಅನ್ನವಿಲ್ಲದಲೆ
ಇರಬಹುದು,
ಪಡೆದ ಕ್ಷೇತ್ರವ ಬಿಟ್ಟು
ಹೊರಡಬಹುದು,
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ
ಬಿಡಬಹುದು,
ಕಡಲೊಡೆಯ ನಿನ್ನಡಿಯ ಗಳಿಗೆ
ಬಿಡಲಾಗದು…!!
ಪ್ರಾಣವನು ಪರರು ಬೇಡಿದರೆತ್ತಿ
ಕೊಡಬಹುದು,
ಮಾನದಲಿ ಮನವ ತಗ್ಗಿಸಲು
ಬಹುದು,
ಪ್ರಾಣನಾಯಕನಾದ ಆದಿ ಕೇಶವರಾಯ,
ಜಾಣ ಶ್ರೀ ಕೃಷ್ಣ ನಿನ್ನಡಿಯ
ಬಿಡಲಾಗದು.
ರಚನೆ: ಕನಕದಾಸರು